ತುಳುನಾಡಿನ ಆರಾಧನಾ ಪರಂಪರೆಯಲ್ಲಿ ದೇವ ಮತ್ತು ದೈವದ ಆರಾಧನೆಗೆ ಅಷ್ಟೇನೂ ಭಿನ್ನತೆಯಿಲ್ಲ. ದೇವರನ್ನು ಎಷ್ಟು ನಂಬುತ್ತಾರೋ, ಎಷ್ಟು ಪೂಜಿಸುತ್ತಾರೋ ಅಷ್ಟೇ ಅಲ್ಲಿನ ದೈವವನ್ನೂ ನಂಬುತ್ತಾರೆ. ಅದರಲ್ಲೂ ಪಂಜುರ್ಲಿ ಮತ್ತು ಗುಳಿಗ ದೈವ ಪ್ರಮುಖವಾದುವು. ಪಂಜುರ್ಲಿ ದೈವವೆಂದರೆ ಏನು..? ಪಂಜುರ್ಲಿ ದೈವದ ಮಹತ್ವವೇನು ಗೊತ್ತೇ..?
ತುಳುನಾಡಿನಲ್ಲಿ ದೇವರಾಧನೆಗೆ ಎಷ್ಟು ಮಹತ್ವವನ್ನು ನೀಡಲಾಗುತ್ತದೆಯೋ ಅಷ್ಟೇ ಮಹತ್ವವನ್ನು ದೈವಾರಾಧನೆಗೂ ನೀಡಲಾಗುತ್ತದೆ. ತುಳುನಾಡಿನಲ್ಲಿ ಆರಾಧನೆ ಮಾಡಲಾಗುವ ದೈವಗಳಲ್ಲಿ ‘ಪಂಜುರ್ಲಿ’ ಮತ್ತು ‘ಗುಳಿಗ’ ಪ್ರಮುಖವಾದುವು. ನಮ್ಮ ತುಳುನಾಡಿಗರಲ್ಲಿ ಈ ದೈವಗಳು ಸರ್ವೇಸಾಮಾನ್ಯವಾದರೂ ದೇಶಾದ್ಯಂತ ಇದರ ಪರಿಚಯ ಮಾಡಿಸಿದ್ದು, ಇತ್ತೀಚೆಗಷ್ಟೇ ತೆರೆಕಂಡ ಕನ್ನಡದ ‘ಕಾಂತಾರ’ ಸಿನಿಮಾ.ಪಂಜುರ್ಲಿ ಎಂದರೆ ಹಂದಿಯ ಮುಖವನ್ನು ಹೋಲುವ ಒಂದು ಶಕ್ತಿಶಾಲಿ ದೈವ. ಹಂದಿಯ ಮುಖದ ಒಂದು ದೈವ.
ಮೂಲ ಮೈಸಂದಾಯ(ಮಹಿಷ), ನಂದಿಗೋಣೆ(ಹೋರಿ), ಹೈಯ್ಗುಳಿ(ಹಾಯುವ ಗೂಳಿ), ಪಿಲ್ಚಂಡಿ( ಹುಲಿ) ಆನೆ, ಕುದುರೆ ಇವೆಲ್ಲವೂ ಒಂದಲ್ಲ ಒಂದು ರೂಪದಲ್ಲಿ ತುಳುನಾಡಿನಲ್ಲಿ ಪೂಜೆಗೆ ಪ್ರಶಂಸನೀಯವಾಗಿದೆ.ಪಂಜುರ್ಲಿ ಎಂಬ ಪದವು ಸಾಂಪ್ರದಾಯಿಕವಾಗಿ “ಪಂಜಿದ ಕುರ್ಲೆ” ಎಂಬ ಪದದಿಂದ ಬಂದಿದೆ. ಅಂದರೆ ತುಳು ಭಾಷೆಯಲ್ಲಿ ಎಳೆಯ ಕಾಡುಹಂದಿ. ತುಳುನಾಡಿನ ಪ್ರಾಚೀನ ದೈವಗಳಲ್ಲಿ ಪಂಜುರ್ಲಿಯೂ ಒಂದು. ಪಂಜುರ್ಲಿಯನ್ನು ತುಳುನಾಡಿನಾದ್ಯಂತ ಹಂದಿ ಎಂದು ಪೂಜಿಸಲಾಗುತ್ತದೆ.
ನಮ್ಮ ಪೂರ್ವಜರು ತಾವು ಬೆಳೆದ ಬೆಳೆಗಳನ್ನು ರಕ್ಷಿಸಲು ಪಂಜುರ್ಲಿ ದೈವವನ್ನು ಪೂಜಿಸುತ್ತಿದ್ದರು ಮತ್ತು ನಂತರ ಅವರು ಅದೇ ಭತ್ತದ ಅಕ್ಕಿಯನ್ನು ಅರ್ಪಿಸುವ ಮೂಲಕ ತಮ್ಮ ಬೆಳೆಗಳನ್ನು ರಕ್ಷಿಸಿದ ದೈವಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದರು.ತುಳುನಾಡಿನಲ್ಲಿ ಆರಾಧಿಸಪಲ್ಡುವ ಈ ಎರಡೂ ದೈವಗಳು ತಮ್ಮನ್ನು ನಂಬಿದವರನ್ನು ರಕ್ಷಿಸುತ್ತದೆ ಮತ್ತು ಅವರ ಬಯಕೆಗಳನ್ನು ಈಡೇರಿಸುತ್ತದೆ ಎನ್ನುವ ನಂಬಿಕೆಯಿದೆ. ನ್ಯಾಯಾಲಯಗಳಲ್ಲಿ ಸಿಗದ ಅದೆಷ್ಟೋ ಸಮಸ್ಯೆಗಳಿಗೆ ಪಂಜುರ್ಲಿ ಪರಿಹಾರವನ್ನು ನೀಡುತ್ತಾನೆ ನ್ನುವ ನಂಬಿಕೆ ತುಳುನಾಡಿನವರದ್ದು.
ಈ ದೈವಗಳು ನಂಬಿದ ಕುಟುಂಬವನ್ನು ಕೈಹಿಡಿದು ಕಾಪಾಡುತ್ತದೆ ಎನ್ನುವ ನಂಬಿಕೆಯಿದೆ. ತುಳುನಾಡಿನಲ್ಲಿ ಪಂಜುರ್ಲಿಯನ್ನು ದೈವದ ಪ್ರತಿಬಿಂಬಾಕಾರದಲ್ಲಿ ಪ್ರತಿಯೊಬ್ಬರೂ ಮನೆಯಲ್ಲೇ ಪೂಜಿಸಲಾದರೆ, ಇನ್ನು ಗುಳಿಗ ದೈವವನ್ನು ಕಲ್ಲಿನ ರೂಪದಲ್ಲಿ ಮನೆಯ ಹೊರಗೆ ತೋಟದಲ್ಲಿ, ಅಥವಾ ಆ ಕುಟುಂಬಕ್ಕೆ ಸೇರಿದ ಯಾವುದೇ ಸ್ಥಳದಲ್ಲಿ ಪೂಜಿಸಲಾಗುತ್ತದೆ.