ಪಾಟ್ನಾ: ಸಲಿಂಗ ಸಂಬಂಧಕ್ಕೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಬೇಸರಗೊಂಡು ಹುಡುಗಿಯರಿಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬಿಹಾರ್ನಲ್ಲಿ ನಡೆದಿದೆ.
ಭಾರತದಲ್ಲಿ ಇನ್ನು ಮುಂದೆ ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು 2018ರ ಸೆಪ್ಟೆಂಬರ್ ತಿಂಗಳು ಮಹತ್ವದ ತೀರ್ಪು ನೀಡಿತ್ತು. ಆದರೂ ಭಾರತದಲ್ಲಿ ಅನೇಕ ಸಂದರ್ಭಗಳಲ್ಲಿ ಸಲಿಂಗ ಸಂಬಂಧವನ್ನು ಮುಕ್ತವಾಗಿ ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ. ಇಂತಹದ್ದೇ ತೊಂದರೆಯನ್ನು ಈಗ ಬಿಹಾರ್ನ ಇಬ್ಬರು ಹುಡುಗಿಯರು ಎದುರಿಸುತ್ತಿದ್ದಾರೆ.
ಪರಸ್ಪರ ಪ್ರೀತಿಸುತ್ತಿರುವುದಾಗಿ ಹೇಳಿಕೊಂಡ ಇಬ್ಬರು ಅಸಹಾಯಕ ಹುಡುಗಿಯರು ಠಾಣೆ ಮೆಟ್ಟಿಲೇರಿದ್ದಾರೆ. ಬಿಹಾರದ ಪಾಟ್ನಾದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ಸ್ವೀಕರಿಸಲು ನಿರಾಕರಿಸಿದ ನಂತರ ಪಾಟ್ನಾ ಎಸ್ಎಸ್ಪಿ ಮಾನವಜಿತ್ ಸಿಂಗ್ ಧಿಲ್ಲೋನ್ ಅವರಿಂದ ರಕ್ಷಣೆ ಕೋರಿದ್ದಾರೆ.
ಇಂದ್ರಪುರಿ ನಿವಾಸಿ ತಾನಿಷ್ಕ್ ಶ್ರೀ ಮತ್ತು ಪಾಟ್ನಾದ ಸಹರ್ಸಾ ನಿವಾಸಿ ಶ್ರೇಯಾ ಘೋಷ್ ಒಟ್ಟಿಗೆ ವಾಸಿಸಲು ಬಯಸಿದ್ದರು. ಆದರೆ ಅವರ ಕುಟುಂಬ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ತನಿಷ್ಕ್ ಶ್ರೀ ಪ್ರೀತಿಯನ್ನು ತಿಳಿದ ನಂತರ ಅವರ ಮನೆಯವರು ಆಕೆಯನ್ನು ಗೃಹಬಂಧನದಲ್ಲಿ ಇಟ್ಟಿದ್ದರು. ಆಕೆ ಮೊಬೈಲ್ ಅನ್ನು ಕಸಿದುಕೊಂಡಿದ್ದರು.
ಈ ವೇಳೆ ಸಿನಿಮಾ ನೋಡುವುದಾಗಿ ಸುಳ್ಳು ಹೇಳಿ ಹೊರಬಂದಿದ್ದ ಇಬ್ಬರೂ ಪರಸ್ಪರ ಭೇಟಿಯಾಗಿದ್ದಾರೆ. ನಂತರ ಇಬ್ಬರೂ ತಮಗೆ ರಕ್ಷಣೆ ನೀಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತಾವಿಬ್ಬರೂ ಐದು ವರ್ಷಗಳಿಂದ ಪರಸ್ಪರ ಸ್ನೇಹಿತರಾಗಿದ್ದು, ಇಬ್ಬರೂ ಒಟ್ಟಿಗೆ ಇರಲು ಬಯಸಿದ್ದೇವೆ. ನಾವು 18 ವಯಸ್ಸು ಮೇಲ್ಪಟ್ಟವರಾಗಿದ್ದೇವೆ. ಆದರೆ ನಮ್ಮ ಕುಟುಂಬ ಸದಸ್ಯರು ಒಟ್ಟಿಗೆ ಇರಲು ಅವಕಾಶ ನೀಡುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.
ತನ್ನ ಸಂಗಾತಿಯ ಮಾತಿಗೆ ಧ್ವನಿಗೂಡಿಸಿದ ಶ್ರೇಯಾ ಘೋಷ್, ನಾನು ನನ್ನ ಸ್ನೇಹಿತ ತಾನಿಷ್ಕ್ ಶ್ರೀ ಜೊತೆ ಇರಲು ಬಯಸುತ್ತೇನೆ. ನಾವಿಬ್ಬರೂ ಒಟ್ಟಿಗೆ ವಾಸಿಸಲು ನಿರ್ಧರಿಸಿದ್ದೇವೆ. ಇದು ನನ್ನ ಸ್ನೇಹಿತೆ ಕುಟುಂಬಕ್ಕೆ ಇಷ್ಟವಿಲ್ಲ ಎಂದು ದೂರಿದ್ದಾರೆ. ಇಬ್ಬರ ಮನವಿಯನ್ನು ಆಲಿಸಿರುವ ಎಸ್ಎಸ್ಪಿ, ವಿಚಾರಣೆ ನಡೆಸಿ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.