ಹನುಮನ ಜನ್ಮ ಸ್ಥಳದ ಬಗ್ಗೆ ಟಿಟಿಡಿ ಮಾಡಿವ ವಾದ ಎಲ್ಲರಿಗೂ ಗೊತ್ತೇ ಇದೆ. ಇಲ್ಲಿಯವರೆಗೂ ರಾಜ್ಯ, ದೇಶ-ವಿದೇಶದ ಜನರು ಶತಮಾನಗಳಿಂದ ನಂಬಿಕೊಂಡು ಬಂದಿರುವ ಅಂಜನೇಯನ ಜನ್ಮಸ್ಥಳವೆಂದೇ ನಂಬಲಾಗಿರುವ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ಬಗ್ಗೆ, ಹನುಮನನ್ನು ಆರಾಧಿಸುವ ಭಕ್ತರಲ್ಲಿ ಗೊಂದಲ ಉಂಟಾಗಿದೆ. ಗೊಂದಲದ ವಾದ ಮಾಡಿದವರು ಸಾಮಾನ್ಯ ವ್ಯಕ್ತಿ ಅಥವಾ ಸಂಸ್ಥೆಯಾಗಿದ್ದರೆ ಅಲಕ್ಷ್ಯ ಮಾಡಬಹುದು. ಆದರೆ, ಅದನ್ನು ಅನವಶ್ಯಕ ಗೊಂದಲ ಮೂಡಿಸಿದ್ದು ತಿರುಮಲದ ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಂ).
ಟಿಟಿಡಿ ವಾದವೇನು?
ಆಂಜನೇಯ ಹುಟ್ಟಿದ್ದು ತಿರುಪತಿಯಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿ ಎಂಬುದನ್ನು ಸಂಶೋಧಿಸಲು ಹಾಗೂ ಸಾಕ್ಷ್ಯಗಳನ್ನು ಕಲೆ ಹಾಕಲು ತಜ್ಞರ ಸಮಿತಿಯೊಂದನ್ನು ರಚಿಸಿತ್ತು. ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಮುರಳೀಧರ ಶರ್ಮ ನೇತೃತ್ವದ ಸಮಿತಿಯು “ಪುರಾಣಗಳಲ್ಲಿ ಉಲ್ಲೇಖಗೊಂಡ, ಹನುಮಂತನ ಜನ್ಮದಿನ & ಸ್ಥಳದ ಬಗ್ಗೆ ಹಲವಾರು ಸಾಹಿತ್ಯಿಕ ಸಾಕ್ಷ್ಯಗಳು, ಕೆಲವಾರು ಶಿಲಾಶಾಸನಗಳಲ್ಲಿ ಉಲ್ಲೇಖಗೊಂಡ ಮತ್ತು ಭೌಗೋಳಿಕ ಅಂಶಗಳನ್ನು ಸಮಗ್ರವಾಗಿ ಅಧ್ಯಯನ ನಡೆಸಿ ತಿರುಮಲದ ಅಂಜನಾದ್ರಿ ಪರ್ವತದ ವ್ಯಾಪ್ತಿಯಲ್ಲಿರುವ ಅಕಾಶಗಂಗಾ ಜಲಪಾತ ಸಮೀಪದ ಜಪಲಿ ತೀರ್ಥವೇ ಆಂಜನೇಯನ ಜನ್ಮಸ್ಥಳ. ವೆಂಕಟಾಚಲಂ ಎನ್ನುವುದನ್ನು ಅಂಜನಾದ್ರಿ ಎಂದು ಹೇಳಿದೆ. ಇದರ ಜತೆಗೆ 19 ಇತರೆ ಹೆಸರುಗಳೂ ಈ ಬೆಟ್ಟಕ್ಕಿವೆ ಎಂದು ಹೇಳಿದ ಅವರು, ತ್ರೇತಾಯುಗದಲ್ಲಿ ರಾಮಭಕ್ತ ಹನುಮಂತ ಅಂಜನಾದ್ರಿಯಲ್ಲೇ ಹುಟ್ಟಿದ್ದ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
ಅಂಜನಾದ್ರಿಯಲ್ಲಿ ಅಪಾರ ಪುರಾವೆ
ನಮ್ಮ ಮಹಾಕಾವ್ಯ, ಪುರಾಣ, ಇತಿಹಾಸ, ಶಾಸನ, ಜನಪದರು ಮತ್ತು ಜನಪದ ಸಾಹಿತ್ಯಗಳು ಹೇಳುವುದು ಈಗಿನ ಕೊಪ್ಪಳ ಜಿಲ್ಲೆ ಕಿಷ್ಕಿಂಧೆ ಅಂಜನಾದ್ರಿ ಬೆಟ್ಟವೇ ಹನುಮನ ಜನ್ಮಸ್ಥಳವೆಂದು ಸಾರಿ ಹೇಳುತ್ತಿವೆ. ಇದಕ್ಕೆ ಪೂರಕವಾಗುವಂತಹ ಅನೇಕ ಕುರುಹುಗಳು, ಸ್ಮಾರಕಗಳು, ಐತಿಹ್ಯಗಳು ನಮಗೆ ಸ್ಥಳೀಯವಾಗಿ ಸಿಗುತ್ತವೆ, ಸಿಕ್ಕಿವೆ.
ವಾಲ್ಮೀಕಿ ರಾಮಾಯಣದಲ್ಲಿ ಪ್ರಸ್ತಾಪಿಸುವಂತೆ ಹನುಮನು ಹುಟ್ಟಿದ್ದು ಸುಮೇರು ಪರ್ವತದಲ್ಲಿ. ಸುಮೇರು ಪರ್ವತ ಎಂದರೆ ಸೂರ್ಯಾಸ್ತದ ವೇಳೆಯಲ್ಲಿ ಬಂಗಾರದಂತೆ ಕಂಗೊಳಿಸುವುದು. ಅಂಜನಾದ್ರಿ ಪರ್ವತ ಸೂರ್ಯಾಸ್ತದ ಸಂದರ್ಭದಲ್ಲಿ ಬಂಗಾರದಂತೆ ಕಂಗೊಳಿಸುತ್ತದೆ. ಅದನ್ನೇ ಸುಮೇರು ಪರ್ವತ ಎಂದು ಕರೆದಿರುವುದು. ಈಗಲೂ ದೇಶ-ವಿದೇಶಗಳ ಪ್ರವಾಸಿಗರು ಇಲ್ಲಿ ಸೂರ್ಯಾಸ್ತವಾಗುವುದನ್ನು ನೋಡಲು ಕಾತುರದಿಂದ ಕಾಯುವುದನ್ನು ನೋಡಬಹುದು. ಅಲ್ಲದೇ ಸ್ಥಳೀಯವಾಗಿ ಸಿಗುವ ಐತಿಹ್ಯದಲ್ಲಿ ತಾಯಿ ಅಂಜನಾದೇವಿ ಅವರು ಬಾಣಂತಿ ಆಗಿದ್ದಾಗ ಸ್ನಾನಕ್ಕೆ ನೀರಿರಲಿಲ್ಲ. ಆ ಸಂದರ್ಭದಲ್ಲಿ ಹನುಮ ತುಂಗಭದ್ರೆಯನ್ನೇ ಎರಡು ಭಾಗವಾಗಿಸಿ, ಒಂದು ಭಾಗವನ್ನು ತಾಯಿಯ ಬಳಿಗೆ ಬರುವಂತೆ ಮಾಡಿದನಂತೆ. ಅಂದಿನಿಂದ ಹಂಪಿ ಹೊಳೆ ಋಷ್ಯಮುಖ ಪರ್ವತವನ್ನೂ ಬಳಸಿ ಎರಡು ಭಾಗಗಳಾಗಿ ಹರಿಯಲು ಆರಂಭಿಸಿತು. ಈಗಲೂ ನದಿ ಎರಡು ಕವಲುಗಳಾಗಿ ಹರಿಯುತ್ತದೆ. ಈ ಸ್ಥಳ ʼಹನುಮನ ಸೆಳವುʼ ಎಂದು ಕರೆಯುತ್ತಾರೆ.
ಅಡವ್ಯಾಗಂಜನಾದೇವಿ ಹನುಮನ ಹಡೆದಾಳ
ತೊಡೆಯ ತೊಳೆಯೋಕ ನೀರಿಲ್ಲ!
ಹನುಮಣ್ಣ ಸುತ್ತಲ ಹೊಳೆಯ ತಿರುವ್ಯಾನೆ!
ಇದೇ ಸಂಗತಿಯನ್ನು ಜಾನಪದ ಹಾಡುಗಳಲ್ಲೂ ಕಾಣಬಹುದು.ರಾಮಾಯಣ ಕಾವ್ಯದಲ್ಲಿ ಬರುವ ಕಿಷ್ಕಿಂಧಾ ಕಾಂಡದಲ್ಲಿ ನಡೆಯುವ ಪ್ರಸಂಗಗಳೆಲ್ಲ ಜರಗಿದ್ದು ಹಂಪಿ ಆನೆಗೊಂದಿಯ ಕಿಷ್ಕಿಂಧೆಯಲ್ಲಿ. ಇಲ್ಲಿಯ ದುರ್ಗಾದೇವಿ ದೇವಸ್ಥಾನವಿರುವ ಬೆಟ್ಟವೇ ವಾಲಿ ಪರ್ವತ ಅಥವಾ ವಾಲಿಖಿಲ್ಲಾ. ಕಿಷ್ಕಿಂಧೆಯ ಅಧಿಪತಿಯಾಗಿದ್ದ ಇವನು ಆಡಳಿತ ನಡೆಸಿದ್ದ. ಈ ಬೆಟ್ಟದ ದಕ್ಷಿಣ ಬದಿಯ ಒಂದು ಭಾಗದ ಗವಿಯೇ ವಾಲಿ ಭಂಡಾರ.
ಹನುಮ ಜನಿಸಿದ ಅಂಜನಾದ್ರಿ, ಹಂಪೆಯ ಸುತ್ತಮುತ್ತ ಇರುವ ಸುಗ್ರೀವ ಗುಹೆ, ವಾಲಿ ಕಾಷ್ಟ, ಮತಂಗ ಋಷಿಗಳ ಪರ್ವತ, ಶಬರಿ ಗುಹೆ, ಮಾಲ್ಯವಂತನ ಗುಹೆ, ಸೀತೆಯ ಸೆರಗು ಕುರುಹು ಕೂಡ ಶಿಲೆಯಲ್ಲಿ ಅಚ್ಚಾಗಿದೆ ಎನ್ನುವ ನಂಬಿಕೆಯಿದೆ.
ವ್ಯಾಸರಾಯರೇ ಹೇಳಿದ್ದರು
ಶ್ರೀ ಕೃಷ್ಣದೇವರಾಯನ ಗುರುಗಳಾದ ವ್ಯಾಸರಾಯರಿಗೆ ಅಂಜನಾದ್ರಿಯೇ ಹನುಮಂತನ ಮೂಲ ತಿಳಿದಿತ್ತು. ಹೀಗಾಗಿ ಅವರು ಅರಸನಿಗೆ ಹೇಳಿ ಸಾಮ್ರಾಜ್ಯದಾದ್ಯಂತ 734 ಹನುಮನ ದೇವಾಲಯಗಳನ್ನು ನಿರ್ಮಾಣ ಮಾಡಿಸಿದ್ದರು. ಈ ಶಾಸನಗಳ ಉಲ್ಲೇಖ, ದಾಖಲೆ, ಸಾಹಿತ್ಯ, ಐತಿಹ್ಯ, ಜನರ ನಂಬಿಕೆಗಳನ್ನು ನೋಡಿದಾಗ ಅಂಜನಾದ್ರಿ ಬೆಟ್ಟದಲ್ಲಿಯೇ ಹನುಮ ಜನಿಸಿದ್ದು ಎನ್ನುವುದು ನಿರ್ವಿವಾಗಿದೆ. ಪ್ರತಿವರ್ಷ ಉತ್ತರ ಭಾರತದ ಲಕ್ಷಾಂತರ ಪ್ರವಾಸಿಗರು, ಭಕ್ತರು, ಖ್ಯಾತನಾಮರು ಅಂಜನಾದ್ರಿಗೆ ಭೇಟಿ ನೀಡುತ್ತಾರೆ.
ಇಂಥ ಹೊತ್ತಿನಲ್ಲಿ ಟಿಟಿಡಿ ವಿವಾದ ಕೆದಕಿದೆ. ಯಾರೇ ಏನೇ ಹೇಳಿದರೂ ಜನರ ನಂಬುಗೆಯಲ್ಲಿ ಹನುಮನ ಜನ್ಮಸ್ಥಳ ಅಂಜನಾದ್ರಿಯೇ ಆಗಿದೆ.